ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ವತಿಯಿಂದ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ ಆಯೋಜನೆ. ಜಪಾನ್ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಭಾಗಿ. ಸಂಪೂರ್ಣ ವಿವರ ಇಲ್ಲಿದೆ…
- *ಆದಿಚುಂಚನಗಿರಿ ವಿವಿಯಲ್ಲಿ 2 ದಿನಗಳ ಕಾಲ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜನೆ.
- *ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.
- *ಜಪಾನ್, ಇಥಿಯೋಪಿಯಾ ಸೇರಿದಂತೆ ವಿವಿಧ ದೇಶಗಳಿಂದ 13 ಹಿರಿಯ ಸಂಶೋಧಕರ ಭಾಗಿ.
ಬೆಂಗಳೂರು: ಪ್ರತಿಷ್ಠಿತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್’ ಕಾಲೇಜಿನಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ ಅವರು ಮಾಹಿತಿ ನೀಡಿದ್ದಾರೆ..
ಗುರುವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಭಾಗವಹಿಸುತ್ತಿರುವ ಗಣ್ಯರ ವಿವರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆ
- ಅಧ್ಯಕ್ಷತೆ: ಈ ಬೃಹತ್ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ವಹಿಸಲಿದ್ದಾರೆ.
- ಉದ್ಘಾಟನೆ: ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
- ಇತರೆ ಗಣ್ಯರು: ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಶಾಸಕ ಮತ್ತು ಮಾಜಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ.
ದೇಶ-ವಿದೇಶಗಳ ಪ್ರಮುಖ ವಿಜ್ಞಾನಿಗಳ ಭಾಗಿ
ಈ ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶ ಹಾಗೂ ವಿದೇಶಗಳ ಹಲವು ಪ್ರಮುಖ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಉಪಸ್ಥಿತರಿರಲಿದ್ದಾರೆ:
- ಎಸ್.ಇ.ಆರ್.ಬಿ (SERB) ನ್ಯಾಷನಲ್ ಸೈನ್ಸ್ ಅಧ್ಯಕ್ಷ ಹಾಗೂ ಐ.ಐ.ಎಸ್.ಇ.ಆರ್ (IISER) ತಿರುಪತಿಯ ನಿಕಟಪೂರ್ವ ನಿರ್ದೇಶಕ ಪ್ರೊ. ಕೆ.ಎನ್. ಗಣೇಶ್.
- ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯ (KSOU) ವಿಶ್ರಾಂತ ಕುಲಪತಿ ಹಾಗೂ ಎನ್ಎಎಸ್ಐ (NASI) ಪೀಠದ ಪ್ರಾಧ್ಯಾಪಕ ಪ್ರೊ. ಕೆ.ಎಸ್. ರಂಗಪ್ಪ.
- ಜಪಾನ್ನ ಪ್ರತಿಷ್ಠಿತ ಹಾಕೈಡೋ (Hokkaido) ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಶಿನ್ ಇಚಿರೊನಿಶಿಮುರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
13 ಅಂತರಾಷ್ಟ್ರೀಯ ಸಂಶೋಧಕರಿಂದ ಪ್ರಬಂಧ ಮಂಡನೆ
ಈ ಎರಡು ದಿನಗಳ ವಿಚಾರ ಸಂಕಿರಣವು ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಅತ್ಯುತ್ತಮ ವೇದಿಕೆಯಾಗಲಿದ್ದು, ಜಪಾನ್, ಇಥಿಯೋಪಿಯಾ ಸೇರಿದಂತೆ ವಿವಿಧ ದೇಶಗಳಿಂದ ಸುಮಾರು 13 ಜನ ಹಿರಿಯ ಸಂಶೋಧಕರು ಮತ್ತು ಪ್ರಾಧ್ಯಾಪಕರು ಆಗಮಿಸಿ ತಮ್ಮ ಮಹತ್ವದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಕುಲಸಚಿವರು ವಿವರಿಸಿದರು.
ಕಾರ್ಯಕ್ರಮದ ಆಯೋಜಕರು: ಈ ವಿಚಾರ ಸಂಕಿರಣವನ್ನು ವಿವಿಯ ಕುಲಪತಿ ಕರ್ನಲ್ ಡಾ. ಎಸ್.ಎ. ಶ್ರೀಧರ, ಅಕಾಡೆಮಿಕ್ ಮುಖ್ಯಸ್ಥ ಡಾ. ಬಿ. ರಮೇಶ್ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಎಮ್.ಜಿ. ಶಿವರಾಮು ಅವರು ಜಂಟಿಯಾಗಿ ಆಯೋಜಿಸಿದ್ದಾರೆ. ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಮುಖ್ಯಸ್ಥ ಡಾ. ಪ್ರಶಾಂತ ಕಾಳಪ್ಪ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಮೆಡಿಸಿನ್ ನಿರ್ದೇಶಕ ಡಾ. ಶೋಬಿತ್ ರಂಗಪ್ಪ ಉಪಸ್ಥಿತರಿದ್ದರು.
ವರದಿ: ಸನತ್ ದೇಸಾಯಿ, ನೀಡ್ಸ್ ಆಫ್ ಪಬ್ಲಿಕ್ – ಬೆಂಗಳೂರು
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಸನತ್ ದೇಸಾಯಿ ಅವರು ನಮ್ಮ ಜಾಲತಾಣದ ಬೆಂಗಳೂರು ವಿಭಾಗದ ವರದಿಗಾರರಾಗಿದ್ದಾರೆ. ಇವರು ಬಿಐಇಟಿ (BIET) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ (B.E) ಹಾಗೂ ಕೆಎಸ್ಒಯು (KSOU) ನಿಂದ ಎಂ.ಎ (ಪತ್ರಿಕೋದ್ಯಮ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ 7 ವರ್ಷಗಳಿಂದ ಫೀಲ್ಡ್ ಜರ್ನಲಿಸಂನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಈ ಹಿಂದೆ ‘ಈಟಿವಿ ಭಾರತ್’ (ETV Bharat) ನಲ್ಲಿ ಅಪರಾಧ, ರಾಜಕೀಯ, ವಿಜ್ಞಾನ-ತಂತ್ರಜ್ಞಾನ ಮತ್ತು ಸಿನಿಮಾ ವಿಭಾಗಗಳಲ್ಲಿ ವ್ಯಾಪಕ ವರದಿಗಾರಿಕೆ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳ ಆಪ್ತ ಕಾರ್ಯದರ್ಶಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ಕೂಡ ಸೇವೆ ಸಲ್ಲಿಸುತ್ತಿದ್ದಾರೆ.


WhatsApp Group




Leave a Reply