ರಾಣೇಬೆನ್ನೂರ: ಯುವಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಹಾಗೂ ಪುಸ್ತಕ ಪ್ರೇಮವನ್ನು ಜಾಗೃತಗೊಳಿಸುವ ಸದುದ್ದೇಶದಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ (ನಿಯೋಜಿತ ಜಿಲ್ಲಾ ಜಾಗೃತಿ ಸಮಿತಿ ಹಾವೇರಿ) ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 25, 2026 ರಂದು ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮವನ್ನು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.
ನಗರದ ಆಯ್ದ ಆರು ಜನ ಪುಸ್ತಕ ಪ್ರೇಮಿಗಳ ಮನೆಗಳಲ್ಲಿ ಈ ಪುಟ್ಟ ಗ್ರಂಥಾಲಯಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಗ್ರಂಥಾಲಯ ನಿರ್ಮಾಣಗೊಂಡ ಆರು ಗಣ್ಯರ ಮನೆಗಳು
ಈ ವಿನೂತನ ಅಭಿಯಾನದ ಅಂಗವಾಗಿ ರಾಣೇಬೆನ್ನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (ಕ.ಸಾ.ಪ) ಅಧ್ಯಕ್ಷರಾದ ಶ್ರೀ ಪ್ರಭಾಕರ ಶಿಗ್ಲಿ, ಪ್ರೊ. ಬಿ. ಬಿ. ನಂದ್ಯಾಲ, ಗಣ್ಯ ವರ್ತಕ ಶ್ರೀ ಜಿ. ಜಿ. ಹೊಟ್ಟಿಗೌಡರ, ನಿವೃತ್ತ ಶಿಕ್ಷಕ ಶ್ರೀ ಆರ್. ಎಸ್. ಪಾಟೀಲ, ನಿನಾಸಂ ಕಲಾವಿದ ಇಸ್ಮಾಯಿಲ್ ಹಾಗೂ ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಅವರ ಮನೆಗಳಲ್ಲಿ ‘ಮನೆಗೊಂದು ಗ್ರಂಥಾಲಯ’ವನ್ನು ಉದ್ಘಾಟಿಸಲಾಯಿತು.
ಪುಸ್ತಕಗಳು ಜ್ಞಾನ ವಿಕಾಸದ ಬೆಳಕಿನ ಕಿಂಡಿಗಳು
ಸಂಜೆ ಡಾ. ಕಾಂತೇಶ ಅಂಬಿಗೇರ ಅವರ ಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಶ್ರೀ ಎಸ್. ಆರ್. ಹಿರೇಮಠ ಅವರು ಸಮಾರೋಪ ನುಡಿಗಳನ್ನಾಡಿದರು.
“ಮನೆಗೊಂದು ದೇವರ ಜಗುಲಿ ಇರುವಂತೆ, ಮನೆಗೊಂದು ಪುಟ್ಟ ಗ್ರಂಥಾಲಯ ಇರುವುದು ಇಂದಿನ ದಿನಗಳಲ್ಲಿ ಅಷ್ಟೇ ಮುಖ್ಯವಾಗಿದೆ. ಪುಸ್ತಕಗಳು ಮನುಷ್ಯನ ಜ್ಞಾನ ವಿಕಾಸಕ್ಕೆ ಬೆಳಕಿನ ಕಿಂಡಿಗಳಿದ್ದಂತೆ. ಆದರೆ, ಆಧುನಿಕ ಜೀವನ ಶೈಲಿಯ ಪಲ್ಲಟಗಳಿಂದ ಯುವಜನತೆ ಪುಸ್ತಕಗಳಿಂದ ವಿಮುಖರಾಗುತ್ತಿರುವುದು ವಿಷಾದದ ಸಂಗತಿ,” ಎಂದು ಕಳವಳ ವ್ಯಕ್ತಪಡಿಸಿದರು. ಓದುವ ಸಂಸ್ಕೃತಿಯನ್ನು ಹಿಗ್ಗಿಸುವ ಆಶಯದೊಂದಿಗೆ, ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಸಮಿತಿ ರಚಿಸಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನಗೊಳಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರ ಈ ಪರಿಕಲ್ಪನೆಯನ್ನು ಅವರು ಶ್ಲಾಘಿಸಿದರು.
ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಲ್. ಎಂ. ಪೂಜಾರ ಅವರು ಪೋಷಕರ ಜವಾಬ್ದಾರಿಯನ್ನು ಎತ್ತಿಹಿಡಿದರು. “ಮನೆಯ ಮಕ್ಕಳಿಗೆ ಓದಿ ಎಂದು ಹೇಳುವ ಪೋಷಕರು ತಾವೇ ಟಿವಿ ನೋಡುತ್ತಾ, ಮೊಬೈಲನ್ನು ಕೈಯಲ್ಲಿ ಹಿಡಿದು ಕುಳಿತರೆ ಮಕ್ಕಳು ಹೇಗೆ ಓದಲು ಸಾಧ್ಯ? ಪೋಷಕರು ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸಲು ಮೊದಲು ಮನೆಗೊಂದು ಪುಟ್ಟ ಗ್ರಂಥಾಲಯ ನಿರ್ಮಿಸುವ ಅಗತ್ಯವಿದೆ,” ಎಂದು ಕಿವಿಮಾತು ಹೇಳಿದರು.
ಪ್ರಾಥಮಿಕ ಹಂತದಿಂದಲೇ ಗ್ರಂಥಾಲಯ ಪರಿಚಯ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಎಚ್.ಡಿ. ಬಡಕರೆಪ್ಪನವರ, “ಶಾಲೆಗೊಂದು ಗ್ರಂಥಾಲಯದ ಅನುಷ್ಠಾನವು ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಹುಟ್ಟುಹಾಕಬಲ್ಲದು. ಇಂದು ಬಹುತೇಕ ಉನ್ನತ ಶಿಕ್ಷಣಕ್ಕೆ ಹೋದ ಮೇಲೆಯೇ ಮಕ್ಕಳಿಗೆ ಗ್ರಂಥಾಲಯ ಪರಿಚಯವಾಗುವ ವಾತಾವರಣವಿದೆ. ಆದರೆ ಪ್ರಾಥಮಿಕ ಹಂತದಿಂದಲೇ ಗ್ರಂಥಾಲಯದ ಪರಿಸರವನ್ನು ಮಕ್ಕಳಿಗೆ ಪರಿಚಯಿಸಿದರೆ, ಮನೆಗೊಂದು ಗ್ರಂಥಾಲಯ ತಾನಾಗಿಯೇ ಆಗುತ್ತದೆ,” ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಸರ್ಕಾರದ ಗಮನ ಸೆಳೆದು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕೆಂದು ಅವರು ಸಲಹೆ ನೀಡಿದರು.
ಉಪಸ್ಥಿತರಿದ್ದ ಗಣ್ಯರು
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಡಾ. ವಿ. ಕೃ. ಗೋಕಾಕ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸತೀಶ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ. ಕೆ. ಎಚ್. ಮುಕಣ್ಣವರ, ಕಸಾಪ ತಾಲೂಕು ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಪ್ರಾಚಾರ್ಯ ಕೆ. ಆರ್. ಕೊಣ್ತಿ, ಈರಣ್ಣ ಬೆಳವಡಿ, ಡಾ. ಚಾಮರಾಜ ಕಮ್ಮಾರ್, ಡಾ. ಹೊನ್ನಪ್ಪ ಹೊನ್ನಪ್ಪನವರ, ಡಾ. ಕಾಂತೇಶ್ ರೆಡ್ಡಿ, ಶ್ರೀನಿವಾಸ ನಲವಾಗಲ, ರಮೇಶ ಬಡಕರೆಪ್ಪನವರ, ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ವೀರೇಶ ಜಂಬಗಿ, ಜಗದೀಶ್ ಮಳೆಮಠ, ಪುಟ್ಟಪ್ಪ ಲಮಾಣಿ, ಲಕ್ಷ್ಮಣ ಶ್ರೀಧರ್ ಮಾಳೋದೆ, ಶೃತಿ ಬಿಲ್ಲಾಳ ಸೇರಿದಂತೆ ಹಲವು ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕುಮಾರಿ ಕೃತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಕಾಂತೇಶ್ ಅಂಬಿಗೇರ ಅವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಅರ್ಚನಾ ಜೇಡರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಮಾರುತಿ ತಳವಾರ್ ಅವರು ‘Needs of Public’ ಜಾಲತಾಣದ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಎ, ಬಿ.ಎಡ್ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಸುಮಾರು ಐದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಮುಖಿ ವಿಚಾರಗಳು ಮತ್ತು ಜನಪರ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ.
ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರುವ ಇವರು, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳವಣಿಗೆಗಳು, ಜನಸಮಸ್ಯೆಗಳು ಹಾಗೂ ನೆಲಮಟ್ಟದ ಸುದ್ದಿಗಳನ್ನು ವರದಿ ಮಾಡುವಲ್ಲಿ ವಿಶೇಷ ಒಲವು ಹೊಂದಿದ್ದಾರೆ.


WhatsApp Group




Leave a Reply