haveri sfi function

ಹಾವೇರಿ ವಿವಿ ಉಳಿವಿಗಾಗಿ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಎಸ್‌ಎಫ್‌ಐ ಸಮ್ಮೇಳನದಲ್ಲಿ ಒಕ್ಕೊರಲ ಆಗ್ರಹ

ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಖಂಡಿಸಿ ಹಾಗೂ ವಿವಿ ಅಭಿವೃದ್ಧಿಗಾಗಿ ಎಸ್‌ಎಫ್‌ಐ (SFI) ಪ್ರಥಮ ಸಮ್ಮೇಳನದಲ್ಲಿ ಬಲಿಷ್ಠ ವಿದ್ಯಾರ್ಥಿ ಚಳುವಳಿಗೆ ಕರೆ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳ ಸಂಪೂರ್ಣ ವಿವರ ಇಲ್ಲಿದೆ…

  • *ಹಾವೇರಿ ವಿವಿಯಲ್ಲಿ ಮೂಲಸೌಕರ್ಯ ಕೊರತೆ; ವಿದ್ಯಾರ್ಥಿಗಳ ಆಕ್ರೋಶ.
  • *ವಿವಿ ಉಳಿವಿಗಾಗಿ ಬಲಿಷ್ಠ ವಿದ್ಯಾರ್ಥಿ ಚಳುವಳಿಗೆ ಕರೆ.
  • *ಎಸ್ಎಫ್ಐ ಸಮ್ಮೇಳನದಲ್ಲಿ ಹಲವು ಹಕ್ಕೊತ್ತಾಯಗಳ ಮಂಡನೆ.

ಹಾವೇರಿ ವಿವಿ ಉಳಿವಿಗಾಗಿ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಎಸ್‌ಎಫ್‌ಐ ಸಮ್ಮೇಳನದಲ್ಲಿ ಒಕ್ಕೊರಲ ಆಗ್ರಹ

ಹಾವೇರಿ: ನೂತನವಾಗಿ ಸ್ಥಾಪನೆಗೊಂಡಿರುವ ಹಾವೇರಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉಳಿವಿಗಾಗಿ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅನಿವಾರ್ಯವಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಪ್ರಥಮ ಘಟಕ ಸಮ್ಮೇಳನದಲ್ಲಿ ಅಭಿಪ್ರಾಯಪಡಲಾಗಿದೆ.

ತಾಲ್ಲೂಕಿನ ಕೆರಿಮತ್ತಿಹಳ್ಳಿ ಸಮೀಪದ ಹಾವೇರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್‌ಎಫ್‌ಐ ವಿವಿ ಘಟಕದ ಪ್ರಥಮ ಸಮ್ಮೇಳನದಲ್ಲಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಗುಣಮಟ್ಟದ ಆಡಳಿತ ಮತ್ತು ಸೌಕರ್ಯ ಅತ್ಯಗತ್ಯ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳ ಜೈನ, “ವಿದ್ಯಾರ್ಥಿ ಚಳುವಳಿಗಳು ಗಟ್ಟಿಗೊಂಡಾಗ ಮಾತ್ರ ವಿಶ್ವವಿದ್ಯಾಲಯದ ಉಳಿವಿಗಾಗಿ ಯಶಸ್ವಿ ಹೋರಾಡಲು ಸಾಧ್ಯವಾಗುತ್ತದೆ. ನಗರ ಪ್ರದೇಶದಿಂದ ಸಾಕಷ್ಟು ದೂರವಿರುವ ಈ ವಿವಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ” ಎಂದರು.

“ಗುಣಮಟ್ಟದ ಶಿಕ್ಷಣಕ್ಕೆ ತಕ್ಕಂತೆ ಗುಣಮಟ್ಟದ ಆಡಳಿತವೂ ಇರಬೇಕು. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಕ್ಯಾಂಪಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಅತ್ಯಗತ್ಯವಾಗಿದೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿ ಒಗ್ಗೂಡಬೇಕು” ಎಂದು ಅವರು ಕರೆ ನೀಡಿದರು.

ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ: ಡಿವೈಎಫ್ಐ ಆಗ್ರಹ

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಹಾಗೂ ಡಿವೈಎಫ್ಐ (DYFI) ರಾಜ್ಯ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. “ವಿಶ್ವವಿದ್ಯಾಲಯಗಳು ಕೇವಲ ಪಾಠದ ಕೇಂದ್ರಗಳಾಗದೆ ಬೌದ್ಧಿಕ ಸ್ವಾವಲಂಬನೆಯ ಕೇಂದ್ರಗಳಾಗಿ ಹೊರಹೊಮ್ಮಬೇಕು. ಪ್ರತಿ ಬಜೆಟ್‌ನಲ್ಲೂ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಪ್ರಸ್ತುತ ವ್ಯವಸ್ಥೆಯಲ್ಲಿ ಯಾವುದೇ ಅಧಿಕಾರಿಗಳು ಬಂದು ವಿದ್ಯಾರ್ಥಿಗಳ ಕಷ್ಟ ಕೇಳುವ ಸ್ಥಿತಿಯಲ್ಲಿಲ್ಲ. ಮೂಲಭೂತ ಸೌಕರ್ಯಗಳನ್ನು ನಾವೇ ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಒಳಸಂಚು ನಡೆಯುತ್ತಿದ್ದು, ಇದರ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಬೇಕು” ಎಂದು ಕಿಡಿಕಾರಿದರು.

ವಿವಿ ಮುಚ್ಚುವ ಹುನ್ನಾರ ವಿಫಲಗೊಳಿಸಿದ ವಿದ್ಯಾರ್ಥಿಗಳು

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., “ಹಾವೇರಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡು ಮೂರು ವರ್ಷಗಳು ಕಳೆದರೂ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿವಿಗೆ ಅನುದಾನ ನೀಡಿ ಅಭಿವೃದ್ಧಿ ಮಾಡಬೇಕಿದ್ದ ಸರ್ಕಾರವೇ, ಅದನ್ನು ಮುಚ್ಚುವ ಹುನ್ನಾರು ನಡೆಸಿತ್ತು. ಈ ನೀತಿಯನ್ನು ಖಂಡಿಸಿ ಎಸ್ಎಫ್ಐ, ಶಿಕ್ಷಣ ಪ್ರೇಮಿಗಳು ಹಾಗೂ ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮ ಇಂದು ವಿವಿ ಉಳಿದುಕೊಂಡಿದೆ” ಎಂದು ನೆನಪಿಸಿದರು.

ಎಸ್‌ಎಫ್‌ಐ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳೇನು?

ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿ, ಸಮ್ಮೇಳನದಲ್ಲಿ ಈ ಕೆಳಗಿನ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು:

  • ವಿವಿಗೆ ಸುಸಜ್ಜಿತ ರಸ್ತೆ ಹಾಗೂ ನಿರಂತರ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು.
  • ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ (ವಿದ್ಯಾರ್ಥಿನಿಲಯ) ಮಂಜೂರು ಮಾಡಬೇಕು.
  • ಶುದ್ಧ ಕುಡಿಯುವ ನೀರು, ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮತ್ತು ಪ್ರಯೋಗಾಲಯಗಳ ನಿರ್ಮಾಣ.
  • ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಮೀಡಿಯಾ ಸ್ಟುಡಿಯೋ ಸ್ಥಾಪನೆ.
  • ಖಾಯಂ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳ ತಕ್ಷಣದ ನೇಮಕಾತಿ.
  • ವಿದ್ಯಾರ್ಥಿ ವೇತನ (Scholarship) ಸಮಸ್ಯೆಗಳ ಶೀಘ್ರ ಪರಿಹಾರ ಹಾಗೂ ಪರೀಕ್ಷಾ ಶುಲ್ಕ ಏರಿಕೆ ವಾಪಸ್.
  • ಸಕಾಲಕ್ಕೆ ಅಂಕಪಟ್ಟಿ ವಿತರಣೆ, ಸೈಬರ್ ಕೇಂದ್ರ, ಜೆರಾಕ್ಸ್ ಸೆಂಟರ್ ಹಾಗೂ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ.

ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ವಿದ್ಯಾರ್ಥಿ ಮುಖಂಡರಾದ ಪೂಜಾ ಬಾರ್ಕಿ ಉಪಸ್ಥಿತರಿದ್ದರು. ಶಂಭುಲಿಂಗ ಸವದತ್ತಿ ಕಾರ್ಯಕ್ರಮ ನಿರೂಪಿಸಿದರು. ಕಾತೇಶ್ ಪಿ.ಹೆಚ್ ಸ್ವಾಗತಿಸಿ ವಂದನಾರ್ಪಣೆ ಮಾಡಿದರು. ಕ್ಯಾಂಪಸ್ ವಿದ್ಯಾರ್ಥಿ ಮುಖಂಡರಾದ ಪರಶುರಾಮ ಎಸ್, ಅರುಣ್ ಜೆ, ಶರಣಪ್ಪ ಜೆ.ಎಮ್, ಪ್ರವೀಣ್ ಮಟ್ಟೇರ, ಲೋಕೇಶ್ ಕೆಂಚಣ್ಣನವರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories